ಕ್ರಿಯಾಪದ
ಪೂರ್ಣಗೊಂಡ ಒಂದು ಕ್ರಿಯೆಯ ಅರ್ಥವನ್ನು ಕೊಡುವ-ಪದಗಳನ್ನು ‘ಕ್ರಿಯಾಪದಗಳು ’ ಎನ್ನುತ್ತೇವೆ.
ಉದಾಹರಣೆ : ತಾಯಿಯು ಅಡಿಗೆಯನ್ನು ಮಾಡುತ್ತಾಳೆ.
ತಂದೆಯು ಕೆಲಸವನ್ನು ಮಾಡಿದನು.
ಅಣ್ಣ ಊಟವನ್ನು ಮಾಡುವನು.
ದೇವರು ಒಳ್ಳೆಯದನ್ನು ಮಾಡಲಿ.
ಅವನು ನಾಳೆಯದಿನ ಮಾಡಾನು (ಮಾಡಿಯಾನು).
‘ಧಾತು’
ಕ್ರಿಯಾಪದದ ಮೂಲರೂಪವನ್ನು ‘ಕ್ರಿಯಾಪ್ರಕೃತಿ’ ಅಥವಾ ‘ಧಾತು’ ಎನ್ನುವರು.
ಧಾತುಗಳ ವಿಧಗಳು
ಧಾತುಗಳಲ್ಲಿ 2 ವಿಧಗಳಿವೆ ಅವುಗಳೆಂದರೆ
೧.ಮೂಲ ಧಾತು
೨. ಪ್ರತ್ಯಯಾಂತ ಧಾತು (ಸಾಧಿತ ಧಾತು):
೧. ಮೂಲಧಾತುಗಳು- ಮಾಡು, ತಿನ್ನು, ಹೋಗು, ಬರು, ಮಲಗು, ಏಳು, ನಡೆ, ನೋಡು, ಓಡು, ನಿಲ್ಲು, ಓದು, ಆಗು, ಹೊಳೆ, ಬದುಕು, ಇಕ್ಕು, ಮುಗಿ, ತೂಗು, ಹಿಗ್ಗು, ನಡುಗು, ಮಿಂಚು, ಮೆಟ್ಟು, ಹಂಚು, ಅಂಜು, ಈಜು, ಉಜ್ಜು, ದಾಟು, ಹುಟ್ಟು, ಒಕ್ಕು, ತುಂಬು, ಮುಚ್ಚು, ಹಿಡಿ, ಕೊಡು, ಹರಡು, ಇಡು, ಪಡೆ, ಕುಣಿ, ಕಾಣು, ಸುತ್ತು, ಒತ್ತು, ಎತ್ತು, ಬಿತ್ತು, ತೆರು, ಒದೆ, ತಿದ್ದು, ಹೊಡೆ, ಬಡಿ, ಬರೆ, ನೆನೆ, ಎನ್ನು, ಒಪ್ಪು, ತಪ್ಪು, ನಂಬು, ಉಬ್ಬು, ಕಾ, ಬೇ, ಮೀ, ಮೇ, ಚಿಮ್ಮು, ಹೊಯ್, ಬಯ್, ಸುಯ್, ಕೊಯ್, ತೆಯ್, ಸುರಿ, ಅರಿ, ಹೀರು, ಸೇರು, ಸೋಲು, ಹೊಲಿ, ಬಲಿ, ಹೇಸು, ಅರಸು, ಹುಡುಕು, ಬಳಸು, ಗುಡಿಸು, ಚೆಲ್ಲು, ತೊಳೆ, ಬೆಳಗು, ಬಡಿಸು, ಇಳಿ, ಏರು, ಹೊಗಳು, ತೆಗಳು, ಬಾಳು, ಬೀಳು, ತಾಳು, ಎಳೆ, ಕಳಿ, ಸೆಳೆ, ತಿಳಿ, ಸುಳಿ, ಕೊರೆ-ಇತ್ಯಾದಿ.
(೨) ಪ್ರತ್ಯಯಾಂತ ಧಾತು (ಸಾಧಿತ ಧಾತು):- ಕೆಲವು ನಾಮ ಪ್ರಕೃತಿಗಳ ಮೇಲೂ, ಧಗ ಧಗ, ಛಟ ಛಟ ಮೊದಲಾದ ಅನುಕರಣ ಶಬ್ದಗಳ ಮೇಲೂ ‘ಇಸು’ ಎಂಬ ಪ್ರತ್ಯಯ ಸೇರಿದಾಗ ಅವು ಪ್ರತ್ಯಯಾಂತ ಧಾತುಗಳೆನಿಸುತ್ತವೆ. ಇವಕ್ಕೆ ಸಾಧಿತಧಾತುಗಳೆಂದೂ ಹೆಸರು.
ಉದಾಹರಣೆಗೆ:-
ನಾಮ ಪ್ರಕೃತಿ + ಇಸು = ಧಾತು - ಕ್ರಿಯಾಪದ
ಕನ್ನಡ + ಇಸು = ಕನ್ನಡಿಸು - ಕನ್ನಡಿಸಿದನು
ಓಲಗ + ಇಸು = ಓಲಗಿಸು - ಓಲಗಿಸುತ್ತಾನೆ
ಅಬ್ಬರ + ಇಸು = ಅಬ್ಬರಿಸು - ಅಬ್ಬರಿಸುವನು
ಅನುಕರಣ ಶಬ್ದಗಳು ಧಾತುಗಳಾಗುವುದಕ್ಕೆ ಉದಾಹರಣೆ:-
ನಾಮ ಪ್ರಕೃತಿ + ಇಸು = ಧಾತು - ಕ್ರಿಯಾಪದ
ಧಗ ಧಗ + ಇಸು = ಧಗಧಗಿಸು - ಧಗಧಗಿಸುತ್ತಾನೆ
ಥಳ ಥಳ + ಇಸು = ಥಳಥಳಿಸು - ಥಳಥಳಿಸುತ್ತಾನೆ
ಗಮ ಗಮ + ಇಸು = ಗಮಗಮಿಸು - ಗಮಗಮಿಸುವುದು
ಛಟ ಛಟ + ಇಸು = ಛಟಛಟಿಸು - ಛಟಛಟಿಸುತ್ತದೆ
ಸಕರ್ಮಕ, ಅಕರ್ಮಕ ಧಾತುಗಳು
ಸಕರ್ಮಕ ಧಾತುಗಳು : ಕರ್ಮಪದವನ್ನು ಅಪೇಕ್ಷಿಸುವ ಧಾತುಗಳಿಗೆ ಸಕರ್ಮಕ ಧಾತುಗಳು ಎನ್ನುವರು .ಉದಾಹರಣೆಗೆ:- ಮಾಡು, ಕೊಡು, ಕೆರೆ, ಬಿಡು, ಉಣ್ಣು, ತೊಡು, ಇಕ್ಕು, ಉಜ್ಜು,ದಾಟು, ಮೆಟ್ಟು, ತಿದ್ದು, ತುಂಬು, ನಂಬು, ಹೊಡೆ, ತಡೆ, ಹೀರು, ಸೇರು, ಹೊಯ್, ಸೆಯ್,ಕೆತ್ತು, ಕಡಿ, ತರ್ (ತರು), ಕೊಯ್, ಮುಚ್ಚು, ತೆರೆ, ಕತ್ತರಿಸು-ಇತ್ಯಾದಿ.
ಅಕರ್ಮಕ ಧಾತುಗಳು :ಕರ್ಮಪದದ ಅಪೇಕ್ಷೆಯಿಲ್ಲದ ಧಾತುಗಳನ್ನು ಅಕರ್ಮಕ ಧಾತುಗಳೆನ್ನುವರು.
ಉದಾಹರಣೆಗೆ:- ಮಲಗು, ಓಡು, ಇರು, ಬದುಕು, ಬಾಳು, ಹೋಗು, ಬರು,ನಾಚು, ಹೆದರು, ಬೀಳು, ಏಳು, ಸೋರು, ಇಳಿ, ಉರುಳು-ಇತ್ಯಾದಿ.
ಅಕರ್ಮಕ ವಾಕ್ಯಗಳು ಸಕರ್ಮಕ ವಾಕ್ಯಗಳು
(೧) ಮಗು ಮಲಗಿತು ಮಗು ಹಾಲನ್ನು ಕುಡಿಯಿತು
(೨) ಹುಡುಗ ಓಡಿದನು ಹುಡುಗನು ಪುಸ್ತಕವನ್ನು ಓದಿದನು
(೩) ತಂದೆ ಇದ್ದಾರೆ ತಂದೆ ಊಟವನ್ನು ಮಾಡಿದನು
(೪) ಅವನು ಬದುಕಿದನು ಅವನು ದೇವರನ್ನು ನೆನೆದನು
(೫) ಅಕ್ಕ ಬಂದಳು ಅಕ್ಕ ಅಡಿಗೆಯನ್ನು ಮಾಡಿದಳು
(೬) ಅವನು ಬಾಳಿದನು ಅವನು ಊರನ್ನು ಸೇರಿದನು
(ಇಲ್ಲಿ ಕರ್ಮಪದದ ಅವಶ್ಯಕತೆ ಇಲ್ಲ) (ಇಲ್ಲಿ ಕರ್ಮಪದ ಬೇಕೇ ಬೇಕು)
ಕ್ರಿಯಾಪದ ರೂಪಗಳು ಉಂಟಾಗುವಿಕೆ
ಧಾತುವಿಗೆ ಕಾಲಸೂಚಕ ಪ್ರತ್ಯಯ ಹಾಗೂ ಆಖ್ಯಾತ ಪ್ರತ್ಯಯಗಳು ಸೇರಿ ಕ್ರಿಯಾಪದಗಳು ಉಂಟಾಗುತ್ತವೆ.
ಕ್ರಿಯಾಪದ = ಧಾತು + ಕಾಲಸೂಚಕ ಪ್ರತ್ಯಯ + ಆಖ್ಯಾತ ಪ್ರತ್ಯಯ
ಕ್ರಿಯಾಪದದ ರೂಪಗಳು
ಎಲ್ಲ ಧಾತುಗಳಿಗೂ ಆಖ್ಯಾತ ಪ್ರತ್ಯಯಗಳು (೧) ವರ್ತಮಾನ, (೨) ಭೂತ, (೩)ಭವಿಷ್ಯತ್ ಕಾಲಗಳಲ್ಲೂ,
(೧) ವಿಧ್ಯರ್ಥ, (೨) ನಿಷೇಧಾರ್ಥಕ (೩) ಸಂಭಾವನಾರ್ಥ ಗಳೆಂಬ ಮೂರು ಅರ್ಥಗಳಲ್ಲೂ ಸೇರಿ ಆರು ಪ್ರಕಾರದ ಕ್ರಿಯಾಪದರೂಪಗಳು ಉಂಟಾಗುತ್ತವೆ.
ಕಾಲರೂಪ ಕ್ರಿಯಾಪದಗಳು
ಧಾತುಗಳಿಗೆ ಆಖ್ಯಾತ ಪ್ರತ್ಯಯಗಳು ಸೇರಿ ಕ್ರಿಯಾಪದಗಳೆನಿಸುವುವು. ಹೀಗೆ ಆಖ್ಯಾತಪ್ರತ್ಯಯಗಳು ಸೇರುವಾಗ ವರ್ತಮಾನ, ಭೂತ, ಭವಿಷ್ಯತ್ ಕಾಲಗಳಲ್ಲಿ ಧಾತುವಿಗೂ ಆಖ್ಯಾತ ಪ್ರತ್ಯಯಕ್ಕೂ ಮಧ್ಯದಲ್ಲಿ ಕ್ರಮವಾಗಿ ಉತ್ತ, ದ, ವ ಎಂಬ ಕಾಲಸೂಚಕ ಪ್ರತ್ಯಯಗಳು ಆಗಮವಾಗಿ ಬರುತ್ತವೆ.
(೧) ವರ್ತಮಾನ ಕಾಲದ ಕ್ರಿಯಾಪದಗಳು
ಧಾತುಗಳಿಗೆ ವರ್ತಮಾನ ಕಾಲಸೂಚಕ ಪ್ರತ್ಯಯ ʼಉತ್ತʼ ಹಾಗೂ ಏನೆ/ಏವೆ , ಇ/ಈರಿ, ಆನೆ/ಆರೆ, ಆಳೆ/ಆರೆ, ಅದೆ/ಅವೆ ಆಖ್ಯಾತ ಪ್ರತ್ಯಯಗಳು ಸೇರಿ ವರ್ತಮಾನಕಾಲ ಕ್ರಿಯಾಪದಗಳೆನಿಸುವುವು.
( ಧಾತುಗಳಿಗೂ ಆಖ್ಯಾತಪ್ರತ್ಯಯಕ್ಕೂ ಮಧ್ಯದಲ್ಲಿ ‘ಉತ್ತ’ ಎಂಬ ಕಾಲಸೂಚಕ ಪ್ರತ್ಯಯವು ಬರುವುದು.)
ಉದಾಹರಣೆ :
೨ ಭೂತಕಾಲದ ಕ್ರಿಯಾಪದಗಳು
ಧಾತುಗಳಿಗೆ ಭೂತ ಕಾಲಸೂಚಕ ಪ್ರತ್ತಯ ʼದʼ ಹಾಗೂ ಎನು/ಎವು, ಎ/ಇರಿ, ಅನು/ಅರು, ಅಳು/ಅರು, ಉದು/ಅವು/ ಇತು ಆಖ್ಯಾತ ಪ್ರತ್ಯಯಗಳು ಸೇರಿ ಭೂತಕಾಲದ ಕ್ರಿಯಾಪದಗಳೆನಿಸುವುವು
೩ ಭವಿಷ್ಯತ್ ಕಾಲದ ಕ್ರಿಯಾಪದಗಳು
ಧಾತುಗಳಿಗೆ ಭವಿಷ್ಯತ್ ಕಾಲಸೂಚಕ ಪ್ರತ್ತಯ ʼಉವ ʼ ಹಾಗೂ ಎನು/ಎವು, ಎ/ಇರಿ, ಅನು/ಅರು, ಅಳು/ಅರು ,ಉದು/ಉವು ಆಖ್ಯಾತ ಪ್ರತ್ಯಯಗಳು ಸೇರಿ ಭವಿಷ್ಯತ್ ಕಾಲದ ಕ್ರಿಯಾಪದಗಳೆನಿಸುವುವು.
ಅರ್ಥರೂಪ ಕ್ರಿಯಾಪದಗಳು
೧ ವಿಧ್ಯರ್ಥಕರೂಪದ ಕ್ರಿಯಾಪದಗಳು
ವಿಧ್ಯರ್ಥ (ವಿಧಿ+ಅರ್ಥ) ರೂಪಗಳು (ವಿಧ್ಯರ್ಥಕರೂಪದ ಕ್ರಿಯಾಪದಗಳು ):- ಆಶೀರ್ವಾದ, ಅಪ್ಪಣೆ, ಆಜ್ಞೆ, ಹಾರೈಕೆ ಇವುಗಳು ತೋರುವಾಗ ಧಾತುಗಳಿಗೆ ಆಖ್ಯಾತಪ್ರತ್ಯಯಗಳು ಸೇರಿ ವಿಧ್ಯರ್ಥಕ ಕ್ರಿಯಾಪದಗಳೆನಿಸುವುವು.( ಏಕವಚನದಲ್ಲಿ ಆಖ್ಯಾತಪ್ರತ್ಯಯ ಲೋಪವಾಗುವುದು. ಬಹು ವಚನದಲ್ಲಿ ಇರಿ ಪ್ರತ್ಯಯವೂ, ಉತ್ತಮಪುರುಷ ಏಕವಚನದಲ್ಲಿ ಎ ಎಂಬುದೂ, ಬಹುವಚನ ದಲ್ಲಿ ವಾ, ಉವಾ, ವ, ಉವ, ಓಣ-ಇತ್ಯಾದಿ ಆಖ್ಯಾತ ಪ್ರತ್ಯಯಗಳು ಬರುವುದುಂಟು.)
ಉದಾಹರಣೆ : ದೇವರು ನಿನಗೆ ಒಳ್ಳೆಯದು ಮಾಡಲಿ.
ಅವರು ಪಾಠವನ್ನು ಓದಲಿ.
ನೀನು ಆ ಕೆಲಸವನ್ನು ಮಾಡು.
ಅವನಿಗೆ ಜಯವಾಗಲಿ.
ಅವನು ಹಾಳಾಗಿ ಹೋಗಲಿ.
ನಾಳೆ ಬೆಂಗಳುರಿಗೆ ಹೋಗೋಣ.
೨ ನಿಷೇಧಾರ್ಥಕ ರೂಪ ಕ್ರಿಯಾಪದಗಳು
ಕ್ರಿಯೆಯು ನಡೆಯಲಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು ಸೇರಿ, ನಿಷೇಧಾರ್ಥಕ ರೂಪ ಕ್ರಿಯಾಪದಗಳೆನಿಸುವುವು. (ಏಕವಚನದಲ್ಲಿ ಅನು, ಅಳು, ಅದು, ಎ, ಎನು ಎಂಬ ಆಖ್ಯಾತಪ್ರತ್ಯಯಗಳೂ, ಬಹುವಚನದಲ್ಲಿ ಅರು, ಅರು, ಅವು, ಅರಿ, ಎವು-ಎಂಬ ಆಖ್ಯಾತಪ್ರತ್ಯಯಗಳೂ ಎಲ್ಲ ಧಾತುಗಳ ಮೇಲೆ ಸೇರುತ್ತವೆ.)
ಉದಾಹರಣೆ: ಮಾಡನು ಮಾಡರು ಮಾಡಳು ಮಾಡರು ಮಾಡದು ಮಾಡವು ಮಾಡೆ ಮಾಡರಿ ಮಾಡೆನು ಮಾಡೆವು
೩ ಸಂಭಾವನಾರ್ಥಕ ರೂಪ ಕ್ರಿಯಾಪದಗಳು
ಕ್ರಿಯೆಯು ನಡೆಯುವಿಕೆಯಲ್ಲಿ ‘ಸಂಶಯ’ ಅಥವಾ ‘ಊಹೆ’ ತೋರುವಲ್ಲಿ ಧಾತುಗಳ ಮೇಲೆ ಆಖ್ಯಾತಪ್ರತ್ಯಯಗಳು ಸೇರಿ ಸಂಭಾವನಾರ್ಥಕ ಕ್ರಿಯಾಪದಗಳೆನಿಸುವುವು. ( ಏಕವಚನದಲ್ಲಿ ಆನು, ಆಳು, ಈತು, ಈಯೆ, ಏನು-ಎಂಬ ಆಖ್ಯಾತ ಪ್ರತ್ಯಯಗಳನ್ನೂ ಬಹುವಚನದಲ್ಲಿ ಆರು, ಆರು, ಆವು, ಈರಿ, ಏವು ಎಂಬ ಆಖ್ಯಾತಎಲ್ಲ ಧಾತುಗಳ ಮೇಲೆ ಸೇರುತ್ತವೆ.)
ಮಾಡಿಯಾನು ಮಾಡಿಯಾರು ಮಾಡಿಯಾಳು ಮಾಡಿಯಾರು ಮಾಡೀತು ಮಾಡಿಯಾವು ಮಾಡೀಯೆ ಮಾಡೀರಿ
ಮಾಡೇನು
ಈಗ ವಿಧ್ಯರ್ಥ, ನಿಷೇಧಾರ್ಥ, ಸಂಭಾವನಾರ್ಥ-ಈ ಮೂರು ರೂಪಗಳು ಒಂದೇ ಧಾತುವಿಗೆ ಹೇಗಾಗುತ್ತವೆಂಬುದನ್ನು ಈ ಕೆಳಗಿನ ಉದಾಹರಣೆಯಿಂದ ತುಲನೆ ಮಾಡಿ ನೋಡೋಣ.
ಕಾಲಪಲ್ಲಟ
ಒಂದು ಕಾಲದ ಕ್ರಿಯೆಯನ್ನು ಇನ್ನೊಂದು ಕಾಲದ ಕ್ರಿಯಾರೂಪದಿಂದ ಹೇಳುವುದೇ ಕಾಲಪಲ್ಲಟ. ಹೀಗೆ ಕಾಲಪಲ್ಲಟವಾಗುವಾಗ ಭವಿಷ್ಯತ್ ಕಾಲದ ಕ್ರಿಯಾಪದಗಳು ವರ್ತಮಾನ ಕಾಲದಲ್ಲೂ ವರ್ತಮಾನದ ಕಾಲದ ಕ್ರಿಯಾಪದಗಳು ಭವಿಷ್ಯತ್ ಕಾಲದಲ್ಲೂ ಪ್ರಯೋಗವಾಗುವುವು.
ಉದಾ.: ೧. ವರ್ತಮಾನಕಾಲವು ಭವಿಷ್ಯತ್ಕಾಲದಲ್ಲಿ
- ಅವನು ಒಳಗೆ ಊಟ ಮಾಡುವನು (ಊಟ ಮಾಡುತ್ತಾನೆ ಎಂದಾಗಬೇಕು)
- ಅವಳು ಒಳಗೆ ಅಡುಗೆ ಮಾಡುವಳು (ಅಡುಗೆ ಮಾಡುತ್ತಾಳೆ ಎಂದಾಗಬೇಕು)
ಉದಾ.: ೨. ಭವಿಷ್ಯತ್ಕಾಲವು ವರ್ತಮಾನಕಾಲದಲ್ಲಿ
- ಅವನು ನಾಳೆ ಹೋಗುತ್ತಾನೆ (ಹೋಗುವನು ಎಂದಾಗಬೇಕು)
- ನಾನು ಮುಂದಿನ ತಿಂಗಳು ಬರುತ್ತೇನೆ (ಬರುವೆನು ಎಂದಾಗಬೇಕು)
ಕರ್ತರಿ ಕರ್ಮಣಿ ಪ್ರಯೋಗ :
ಕರ್ತರಿ ಪ್ರಯೋಗ : ಧಾತುಗಳಿಗೆ ಲಿಂಗ ಮತ್ತು ವಚನವಾಚಕಗಳು ಸೇರಿ ಪೂರ್ಣವಾಕ್ಯಗಳಾಗಿದ್ದರೆ ಅದನ್ನು ಕರ್ತೃ ಪ್ರಧಾನ ವಾಕ್ಯ ಎನ್ನುವರು.("ಕ್ರಿಯಾಪದಕ್ಕೆ ಕರ್ತರಿಪ್ರಯೋಗದಲ್ಲಿ (ಸಕರ್ಮಕ, ಅಕರ್ಮಕ ಕರ್ತರಿ ಪ್ರಯೋಗಗಳಲ್ಲಿ) ಕರ್ತೃವಿನ ಲಿಂಗವಚನಗಳೂ,ಬರುತ್ತವೆ
ಉದಾಹರಣೆ :
ಶಂಕರನು ಊರನ್ನು ಸೇರಿದನು. (ಪುಲ್ಲಿಂಗ)
ಕವಿಯು ಕಾವ್ಯವನ್ನು ಬರೆಯುತ್ತಾನೆ. (ಪುಲ್ಲಿಂಗ)
ತಾಯಿಯು ಹಾಲನ್ನು ಕೊಡುವಳು. (ಸ್ತ್ರೀಲಿಂಗ)
ಅವನು ನನ್ನನ್ನು ಹೊಡೆದನು. (ಪುಲ್ಲಿಂಗ)
ತಂದೆಯು ಮಗುವನ್ನು ರಕ್ಷಿಸುವನು. (ಪುಲ್ಲಿಂಗ)
ಕರ್ಮಣಿ ಪ್ರಯೋಗ : ಧಾತುಗಳಿಗೆ ʼಅಲ್ಪಡುʼ ಎಂಬ ಪ್ರತ್ಯಯ ಸೇರಿ ಅದಕ್ಕೆ ಕಾಲಸೂಚಕ ಮತ್ತು ಆಖ್ಯಾತ ಪ್ರತ್ಯಯಗಳು ಸೇರದಾಗ ಕರ್ಮಪದ ಪ್ರಧಾನ ವಾಕ್ಯಗಳಾಗುತ್ತವೆ.( ಕರ್ಮಣಿ ಪ್ರಯೋಗದಲ್ಲಿ ಕರ್ಮಪದದ ಲಿಂಗವಚನಗಳೂ ಬರುತ್ತವೆ)
ಉದಾಹರಣೆಗೆ:-
ಶಂಕರನಿಂದ ಊರು ಸೇರಲ್ಪಟ್ಟಿತು. (ನಪುಂಸಕಲಿಂಗ)
- ಕವಿಯಿಂದ ಕಾವ್ಯವು ಬರೆಯಲ್ಪಡುತ್ತದೆ. (ನಪುಂಸಕಲಿಂಗ)
ತಾಯಿಯಿಂದ ಹಾಲು ಕೊಡಲ್ಪಡುವುದು. (ನಪುಂಸಕಲಿಂಗ)
ಅವನಿಂದ ನಾನು ಹೊಡೆಯಲ್ಪಟ್ಟೆನು. (ಪುಲ್ಲಿಂಗ)
ತಂದೆಯಿಂದ ಮಗವು ರಕ್ಷಿಸಲ್ಪಡುವುದು. (ನಪುಂಸಕಲಿಂಗ)