ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ.
ಹಿರಿಯರ ಅನುಭವದ ನುಡಿಮುತ್ತೇ ಗಾದೆ. ಕಿರಿಯದಾದ ಮಾತುಗಳಲ್ಲಿ ಹಿರಿಯದಾದ ಅರ್ಥಹೇಳುವುದೇ ಗಾದೆಗಳ ವೈಶಿಷ್ಟ್ಯ. ಗಾದೆಗಳನ್ನು ಒಬ್ಬರನ್ನು ಇನ್ನೊಬ್ಬರಿಗೆ ಹೋಲಿಸುವಾಗ, ಬುದ್ಧಿವಾದ
ಹೇಳುವಾಗ ತಪ್ಪನ್ನು ಎತ್ತಿ ತಿಳಿ ಹೇಳುವಾಗ, ವಿಶೇಷ ಗುಣಗಳ ಮಹತ್ತ್ವವನ್ನು ವಿವರಿಸುವಾಗ
ಗಾದೆಗಳನ್ನು ಬಳಸುತ್ತೇ ವೆ. ಪ್ರಸ್ತುತ ಗಾದೆಯು ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬುದು
ಕನ್ನಡದ ಜನಪ್ರಿಯ ಗಾದೆಗಳಲ್ಲಿ ಒಂದೆನಿಸಿದೆ.
ಸಾಕಷ್ಟು ಸಮಯ ಬಳಸಿ ಶ್ರಮವಹಿಸಿ ಮಾಡಿದ ಕೆಲಸವನ್ನು ಹಾಳು ಮಾಡಲು ಕೆಲವೇ ಕ್ಷಣ ಗಳು
ಸಾಕು ಎನ್ನುವ ವಿಚಾರವನ್ನು ಈ ಗಾದೆ ನಿರೂಪಿಸುತ್ತದೆ.
ಕುಂಬಾರ ತುಂಬ ಶ್ರಮಪಟ್ಟು ಮಡಿಕೆಯನ್ನು ತಯಾರಿಸುತ್ತಾನೆ. ಆವೆಮಣ್ಣನ್ನು ಹದ ಇರುವಲ್ಲಿಂದಹುಡುಕಿ, ನೋಡಿ ತರಬೇಕು; ಅದರಲ್ಲಿರುವ ಮರಳು-ಕಲ್ಲುಗಳನ್ನು ಬೇರ್ಪಡಿಸಬೇಕು; ಹುಡಿಮಾಡಬೇಕು; ನೀರು ಹಾಕಿ ತುಳಿದು ಹದಮಾಡಬೇಕು; ಹಾಗೆ ಮಾಡುವಾಗ ಕೈ ಕಾಲುಗಳಿಗೆ ಕೆಸರನ್ನುಅಂಟಿಸಿಕೊಳ್ಳಬೇಕು; ಅನಂತರ ಹದವಾದ ಮಣ್ಣನ್ನು ತಿಗರಿಯ ಮೇಲಿಟ್ಟು ತಿರುಗಿಸಿ ಆಕಾರ ಕೊಡಬೇಕು.ನೀರಿನಪಸೆ ಆರಿದ ಮೇಲೆ ತಟ್ಟಿ ತಟ್ಟಿ ಬೇಕಾದ ರೂಪಕೊಟ್ಟು ಬಿಸಿಲಿನಲ್ಲಿ ಒಣಗಲು ಬಿಡಬೇಕು. ಆಮೇಲೆ ಆವಿಗೆಯಲ್ಲಿ ವ್ಯವಸ್ಥಿತವಾಗಿ ಜೋಡಿಸಿಟ್ಟು ಸುಡಬೇಕು. ಹದವಾಗಿ ಸುಟ್ಟು ಬಿಸಿ ಆರಿದ ಗಡಿಗೆ - ಮಡಿಕೆ- ಹರವಿ ಮೊದಲಾದುದನ್ನು ಎಚ್ಚರದಿಂದ ಹೊರತೆಗೆದು ಕೂಡಿಡಬೇಕು. ಕುಂಬಾರ ಇಷ್ಟೆಲ್ಲಾ ಕಷ್ಟಪಟ್ಟು ಗಡಿಗೆ ಇತ್ಯಾದಿಗಳನ್ನು ತಯಾರಿಸುತ್ತಾನೆ. ಅವನ್ನು ಒಡೆಯಲು ದೊಣ್ಣೆಗೆ ಒಂದು ನಿಮಿಷವೂ ಬೇಡ.ಒಂದೇ ಏಟು ಕೂಡಿಟ್ಟ ಗಡಿಗೆಗಳನ್ನೆಲ್ಲ ಹಾಳು ಮಾಡಲು ಸಾಕು.
ಯಾವುದನ್ನಾದರೂ ಹಾಳುಗೆಡಿಸುವುದು ಸುಲಭ, ರೂಪಿಸುವುದು ಕಷ್ಟ; ಹಾಳು ಮಾಡುವ ಬುದ್ಧಿ
ಒಳ್ಳೆಯದಲ್ಲವೆಂಬುದನ್ನು ಈ ಗಾದೆ ಎಚ್ಚರಿಸಿದೆ.