ಕೈ ಕೆಸರಾದರೆ ಬಾಯಿ ಮೊಸರು.
ಗಾದೆಗಳು ವೇದಗಳಿಗೆ ಸಮಾನ. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು.
ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಾಗಿವೆ. ವೇದ ಸುಳ್ಳಾದರೂ ಗಾದೆ
ಸುಳ್ಳಾಗದು ಎಂಬ ಮಾತು ಅರ್ಥಪೂರ್ಣವಾಗಿದೆ. ಪ್ರಸ್ತುತ ಗಾದೆಯು ‘ಕೈ ಕೆಸರಾದರೆ ಬಾಯಿ ಮೊಸರು’
ಎಂಬುದು ಕನ್ನಡದ ಜನಪ್ರಿಯ ಗಾದೆಗಳಲ್ಲಿ ಒಂದೆನಿಸಿದೆ.
‘ಕಷ್ಟಪಟ್ಟು ದುಡಿದರೆ ಇಷಾಟಾರ್ಥ ಲಭಿಸುವುದು’ ಎನ್ನುವ ಅರ್ಥವನ್ನು ಈ ಗಾದೆ ಸೂಚಿಸುತ್ತದೆ. ರೈತನಾದವನು ಮಳೆ-ಬಿಸಿಲು ಎನ್ನದೆ ಕೆಸರಿನಲ್ಲಿ, ಧೂಳಿನಲ್ಲಿ ದುಡಿಯುತ್ತಾನೆ. ನೆಲವನ್ನು ಉತ್ತು,ಬೀಜವನ್ನು ಬಿತ್ತಿ, ಕಳೆತೆಗೆದು, ಗೊಬ್ಬರ ಹಾಕಿ, ನೀರನ್ನು ಒದಗಿಸಿ, ಬೆಳೆದ ಬೆಳೆಯನ್ನು ಕಟಾವುಮಾಡುತ್ತಾನೆ. ಒಕ್ಕಣೆ ಮಾಡಿ ಧಾನ್ಯವನ್ನು ಸಂಗ್ರಹಿಸುತ್ತಾನೆ. ತಾನು ಉಣ್ಣುವುದರೊಡನೆ ಲೋಕಕ್ಕೆಅನ್ನವನ್ನೀಯುತ್ತಾನೆ. ಅವನು ಕೈಯನ್ನು ಕೆಸರು ಮಾಡಿಕೊಳ್ಳಲಾರನೆಂದು ಸೋಮಾರಿಯಾಗಿದ್ದರೆ,ಆಹಾರ ಧಾನ್ಯಗಳು ಎಲ್ಲಿಂದ ಬರುತ್ತಿದ್ದವು? ಹಸಿದ ಹೊಟ್ಟೆ ತುಂಬಲು ಸಾಧ್ಯವಾಗುತ್ತಿತ್ತೇ ?ಶ್ರಮ ಪಡದಿದ್ದರೆ, ಸುಖವಾಗಿರಲು ಸಾಧ್ಯವಿಲ್ಲ, ಕಷ್ಟಪಟ್ಟರೆ ಫಲವುಂಟು. ದುಡಿಯಲು ನಾನಾವೃತ್ತಿಗಳಿವೆ. ದೈಹಿಕ ಶ್ರಮದ ವೃತ್ತಿಗಳು ಕೆಲವಾದರೆ, ಬೌದ್ಧಿಕ ಶ್ರಮದ ವೃತ್ತಿಗಳು ಹಲವು. ಯಾವುದಾದರೂ ಸರಿ ಅವರವರ ಅರ್ಹತೆಗಳಿಗನುಗುಣವಾದ ಕೆಲಸವನ್ನು ಮಾಡಬೇಕು; ದೇಹದಂಡನೆ ಮಾಡುವವನ ಬುದ್ಧಿ ಹಿಡಿತದಲ್ಲಿರುತ್ತದೆ . ಸೋಮಾರಿಗಳ ಮನಸ್ಸು ಭೂತದ ಬೀಡಾಗಿರುತ್ತದೆ.. ಜೂಜಾಟ, ಕಳ್ಳತನ,ದರೋಡೆ, ಕೊಲೆ, ಸುಲಿಗೆಗಳಂತಹ ಸುಲಭ ಸಂಪಾದನೆಯ ಮಾರ್ಗದತ್ತ ಪ್ರೇರೇಪಿಸುತ್ತದೆ. ಅಂಥವರು ಸಮಾಜ ಕಂಟಕರೆನಿಸುತ್ತಾರೆ. ತಾತ್ಕಾಲಿಕವಾಗಿ ಅವರ ಬಾಯಿ ಮೊಸರಾಗುವಂತಾದರೂ ಕೊನೆಗೆ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ.
ಬಸವಣ್ಣನವರು ‘ಕಾಯಕವೇ ಕೈಲಾಸ’ವೆಂದು ಸಾರಿದರು. ಪ್ರತಿಯೊಬ್ಬರೂ ದುಡಿಯಬೇಕು. ಆ
ಮೂಲಕ ಬಿಡುಗಡೆ ಪಡೆಯಬೇಕು ಎಂದು ಅವರು ಹೇಳಿದರು.